Wednesday, November 11, 2009

Have a happy weekend



ಭಾನುವಾರ ಬೆಳಿಗ್ಗೆ ಆದ್ರೆ ಸಾಕು, ನಿದ್ದೆಯಿಂದ ಕಣ್ಣು ಬಿಡಲು ಮನಸ್ಸೇ ಬರುವುದಿಲ್ಲ. ಇಂದಾದರೂ ಸ್ವಲ್ಪ ಆರಾಮವಾಗಿ ನಿದ್ದೆ ಮಾಡುವ ಎಂದು ಒಳ ಮನಸ್ಸು ಹೇಳುತ್ತಿರುತ್ತದೆ. ಆದ್ರೂ ಸೂರ್ಯನ ಬೆಳಕು ಬಿದ್ದಾಗ ನಿದ್ದೆ ಎಲ್ಲ ಹೊರಟು ಹೋಗಿರುತ್ತದೆ. ಎದ್ದು ಮೊಬೈಲ್ ನೋಡಿದ್ರೆ Have a happy weekend ಎಸ್ಎಂಎಸ್ ಗ‌ಳಿಂದತುಂಬಿರುತ್ತದೆ.


ಪ್ರತಿ ದಿನ ಶಾಲೆಗೆ ಹೋಗುವ ಪುಟ್ಟ ಮಗುವೂ ಕೂಡ ತನ್ನ ವೀಕೆಂಡ್ ಯಾವಾಗ ಬರುತ್ತೆ ಎಂದು ವಾರದ ಪ್ರಾರಂಭ ದಿನದಲ್ಲಿಯೇ ಲೆಕ್ಕ ಹಾಕುವುದನ್ನು ಕಂಡರೆ ವೀಕೆಂಡ್ ನ‌ ಪ್ರಸಿದ್ದಿ ಎಷ್ಟಿದೆಯೆಂದು ತಿಳಿಯಬಹುದು. ವೀಕೆಂಡ್ ಅರ್ಥಾತ್ ವಾರದ ಕೊನೆಯ ದಿನ ಬಂದರೆ ಸಾಕು ಅದೊಂದು ರೀತಿ ವಿಶಿಷ್ಟ ದಿನ. ಆ ದಿನ ಮನಸ್ಸು ದೇಹ ಎಲ್ಲಕ್ಕೂ ಒಂದು ರೀತಿಯ ರಿಲೀಫ್ ಅನುಭವ. ವಾರವಿಡೀ ಬ್ಯೂಸಿಯಾಗಿ ದಣಿದಿದ್ದ ದೇಹಗಳು ಅಂದು ಹೆಚ್ಚಾಗಿ ಮನಸ್ಸನ್ನು ದಣಿದ ದೇಹವನ್ನು ಹದಗೊಳಿಸಿ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತವೆ.


ಇಂದಿನ ಬ್ಯೂಸಿ ಲೈಫ್ ನ‌ಲ್ಲಿ ಮನೆ ಮಂದಿ ದಿನಂಪ್ರತೀ ಒಟ್ಟಿಗಿರುವ ಅವಕಾಶಗಳು ತುಂಬಾ ಕಡಿಮೆ. ಶಿಫ್ಟ್ ಡ್ಯೂಟಿ ಬಂದ ನಂತರವಂತೂ ಅದು ಕನಸಿನ ಮಾತಾಗಿದೆ. ನಗರ ಪ್ರದೇಶಗಳ ಹಲವು ದಂಪತಿಗಳು ಒಟ್ಟಿಗೆ ಸೇರುವುದು ತಿಂಗಳಿಗೊಮ್ಮೆಯಂತೆ! ಹಾಗಾಗಿ ವೀಕೆಂಡ್ ದಿನ ಮನೆ ಮಂದಿಯ ಜತೆ ಸಮಯ ಕಳೆಯುವವರೇ ಹೆಚ್ಚು. ಗ್ರಾಮಿಣ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಾಣಸಿಗದು. ನಗರ ಪ್ರದೇಶಗಳಲ್ಲಿ ವೀಕೆಂಡ್ ಎಂದರೆ ಅದೊಂದು ರೀತಿಯ ಹಬ್ಬದ ದಿನದಂತೆ.


ಗಂಡ ಹೆಂಡತಿ ಇಬ್ಬರ ಸಂಸಾರ ಮಾತ್ರ ಆಗಿದ್ದರೆ ಪ್ರತೀ ದಿನ ಹೆಂಡತಿ ಅಡುಗೆ ಮಾಡಿ ಬಡಿಸುತ್ತಿದ್ದರೆ ಅಂದು ಆಕೆಗೆ ರೆಸ್ಟ್! ಗಂಡನ ಪಾಕ ಪ್ರವೀಣತೆ ಪರೀಕ್ಷಿಸುವ ಅವಕಾಶವೂ ಆಕೆಗೆ ಸಿಗುತ್ತದೆ. ಇನ್ನೂ ಒಂದೇ ರೂಮ್ ಗ‌ಳಲ್ಲಿರುವ ಬ್ಯಾಚುಲರ್ ಗ‌ಳು ಅಂದು ತಮ್ಮ ಬಟ್ಟೆ ಒಗೆದು ಒಣಗಿಸುವ ಕೆಲಸಗಳನ್ನು ಮುಗಿಸಿ ಸಂಜೆಯಾಗುವ ಹೊತ್ತಿಗೆ ಸ್ನೇಹಿತರೆಲ್ಲಾ ಕೂಡಿಕೊಂಡು ಎಲ್ಲಿಗಾದರೂ ಹೋಗುವ ಪ್ಲಾನ್ ಮಾಡುತ್ತಾರೆ. ಕಾಲೇಜು ಹುಡುಗಿಯರಿಗೆ ಅಂದು ತಮ್ಮ 'ಲುಕ್' ಮೈಂಟೇನ್ ಮಾಡುವ ಕೆಲಸ. ಇನ್ನು ಹಾಸ್ಟೇಲ್ ನ‌ಲ್ಲಿರುವ ವಿದ್ಯಾರ್ಥಿಗಳು ಔಟಿಂಗ್ ಎಲ್ಲಾ ಮುಗಿಸಿಕೊಂಡು ಬಂದು ಅಸೈನ್ಮೆಂಟ್ ಬಾಕಿಯಿದ್ದರೆ ಅದನ್ನು ಪೂರ್ಣಗೊಳಿಸುವ, ಪಾಠವನ್ನು ಮನನ ಮಾಡುವ ಕೆಲಸದಲ್ಲಿ ತೊಡಗುತ್ತಾರೆ.


ಮನೆಯಲ್ಲಿ ಹೆಚ್ಚು ಜನರಿರುವ ಅಮ್ಮಂದಿರಿಗೆ ಅಂದು ಹೆಚ್ಚು ಕೆಲಸ. ಕೆಲವೊಮ್ಮ ಮನೆ ಇಡೀ ಕ್ಲೀನ್ ಮಾಡುವ ಕೆಲಸವೂ ಅಂದೇ ನಡೆದಿರುತ್ತದೆ. ಇನ್ನು ಯುವ ಜೋಡಿಗಳಿಗೆ ಅಂದು ಸಂಜೆ ತಮ್ಮವರ ಜೊತೆ ಶಾಪಿಂಗ್ ಹೋಗುವ ಹುಮ್ಮಸ್ಸು. ಹೆಚ್ಚಾಗಿ ಮಾಲ್ ಗ‌ಳೆಲ್ಲಾ ಇದೇ ದಿನ ತುಂಬಿ ತುಳುಕುತ್ತಿರುತ್ತದೆ. ಇನ್ನು ಟಾರ್ಗೆಟ್ ಕ್ರಾಸ್ ಮಾಡಿದವಾಱೀಗೇ ಆಫೀಸ್ ಬಾಸ್ ಗಳಿಂದ ಪಾರ್ಟೀ ಸಿಗುವುದೂ ಇದೇ ದಿನ. ಎಲ್ಲಾ ಮುಗಿಸಿ ಸ್ನೇಹಿತರೊಂದಿಗೆ ವೀಕೆಂಡ್ ಷೋಗೆ ಹೋಗುವುದೂ ಇದೇ ದಿನ. ವೀಕೆಂಡ್ ಎಂದರೆ ಅದು ಕೇವಲ ಭಾನುವಾರವೇ ಆಗಿರಬೇಕಾಗಿಲ್ಲ. ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ವೀಕೆಂಡ್ ರಜೆ ಎಂದರೆ ಬೇಕಾದ ದಿನಗಳಲ್ಲಿ ತೆಗೆದುಕೊಳ್ಳುವ ಅವಕಾಶವೂ ಇದೆ. ಮಾಧ್ಯಮ ಕೇತ್ರದಲ್ಲಿ ಇದು ಹೆಚ್ಚು. ಕೆಲವರಿಗೆ ಸೋಮವಾರ ವಾರದ ವೀಕೆಂಡ್ ಆದರೆ ಇನ್ನು ಕೆಲವರಿಗೆ ಅದರ ಮರುದಿನ. ಹೀಗೆ ಪಟ್ಟಿ ಸಾಗುತ್ತದೆ.


ವೀಕೆಂಡ್ ಬಂದಾಗ, ಮನಸ್ಸಿಗೆ ಅದು ಖುಷಿ ಕೊಡುವುದು ನಿಜ. ವೀಕೆಂಡ್ ಮುಗಿದಾಗ ಒಂಥರಾ ಬೇಸರವಾಗುವುದು ನಿಜ. ಮುಂದೆ ವೀಕೆಂಡ್ ಗೆ ಎಷ್ಷು ದಿನ ಇದೆ ಎಂದು ಕಳ್ಳ ಮನಸ್ಸು ಅಲ್ಲೇ ಲೆಕ್ಕ ಹಾಕುವುದೂ ಇದೆ ಅಲ್ವಾ? Any way have a happy weekend....

Friday, October 2, 2009

ಗಾಂಧಿ ತಾತನಿಗೊಂದು ಪತ್ರ...


ಪ್ರೀತಿಯ ಬಾಪೂಜಿ,

ಹೇಗಿದ್ದೀರಾ? ನೀವಂತೂ ಸ್ವರ್ಗದಲ್ಲಿ ಆರಾಮವಾಗಿದ್ದೀರಾ ಅಂತ ನಂಗೊತ್ತು. ಯಾಕಂದ್ರೆ ಈ ದೇಶ ಮತ್ತು ಅದರ ಜನತೆಯನ್ನು ಬ್ರಿಟೀಷರ ನರಕ ಯಾತನೆಯಿಂದ ಮುಕ್ತಿಗೊಳಿಸಿದ ನಿಮಗೆ ಸ್ವರ್ಗ ಪ್ರಾಪ್ತವಾಗದಿರುವುದಲ್ಲವೇ? ಬಾಪೂ ನೀವೇನೋ ನಮಗೆ ಒಳ್ಳೆಯದನ್ನೇ ಮಾಡಿ, ಒಳ್ಳೆಯತನವನ್ನೇ ಕಲಿಸಿ ಹೋದ್ರಿ... ಆದರೆ ಇಂದು ನಿಮ್ಮ ಈ ಮಕ್ಕಳು ಏನಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯಾ? ಅದನ್ನು ತಿಳಿಸುವ ಉದ್ದೇಶದಿಂದ ಓರ್ವ ಗೆಳತಿಯಾಗಿ ಈ ಪತ್ರ ಬರೆಯುತ್ತಿದ್ದೇನೆ. ಏಕವಚನ ಪ್ರಯೋಗಿಸುವುದಕ್ಕಾಗಿ ಕ್ಷಮೆಯಿರಲಿ.
ಬಾಪೂ, ನೀ ಅದೆಷ್ಟೋ ಕಷ್ಟಪಟ್ಟು ಹೋರಾಡಿ, ನಮಗಾಗಿ ಬ್ರಿಟೀಷರಿಂದ ಸ್ವಾತಂತ್ರ್ಯ ಕೊಡಿಸಿದೆ. ಆದರೆ ಇಂದು ನಿನ್ನ ಮಕ್ಕಳಿಗೆ ಪ್ರತಿ ದಿನ ಬಿಡು, ಕಡೇ ಪಕ್ಷ ಸ್ವಾತಂತ್ರ್ಯ ಪಡೆದ ದಿನದಂದಾದರೂ ನಿನ್ನ ಶ್ರಮ, ಹೋರಾಟ ನೆನಪಿಸಿಕೊಳ್ಳುವ ವ್ಯವಧಾನ ಇಲ್ಲ. ಆ ದಿನ ರಜೆಯ ದಿನವೆಂದು ಸಂತೋಷ ಪಡುವ ಅದೆಷ್ಟೋ ಜನ ನಮ್ಮಲ್ಲಿದ್ದಾರೆ. ಬಾಪೂ ನೀನೆಂದೂ ಅಧಿಕಾರಕ್ಕಾಗಿ ಹಂಬಲಿಸಿಲ್ಲ. ಸ್ವಾತಂತ್ರ್ಯ ನಂತರ ಎಲ್ಲರೂ ಆಧಿಕಾರ ಬಯಸಿದರೆ ನೀನು ಮಾತ್ರ ಯಾವ ಅಧಿಕಾರ ಬಯಸದೇ ನಿನ್ನಲ್ಲಿದ್ದ ನಿಸ್ವಾರ್ಥ ಮನಸ್ಸನ್ನು ಎಲ್ಲರಿಗೂ ಪರಿಚಯಿಸಿದೆ. ಇಂದು ನಿನಗೆ ಏನಾಗುತ್ತಿದೆ ಗೊತ್ತಾ? ಇಂದು ಜನ ಅಧಿಕಾರಕ್ಕಾಗಿ ಏನು ಬೇಕಾದರು ಮಾಡೋ ಮಟ್ಟಕ್ಕೆ ಬಂದಿದ್ದಾರೆ. ಇಲ್ಲಿ ದಿನ ಬೆಳಗಾದರೆ ಆ ಪಕ್ಷ-ಈ ಪಕ್ಷದ ಮಧ್ಯೆ ಕಚ್ಚಾಟ, ಪಕ್ಷಾಂತರ ಅನ್ನೋ ವಿಷಯ ಮಾದ್ಯಮಗಳಲ್ಲಿ ರಾರಾಜಿಸುತ್ತಿದೆ. ಅಧಿಕಾರಿಗಳ ಭ್ರಷ್ಟಾಚಾರ ನಾವು ನಮ್ಮ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವಂತೆ ಮಾಡಿದೆ. ಇಂದು ಅಧಿಕಾರಿಗಳ ಮತ್ತು ರಾಜಕಾರಣಿಗಳ ಮಿತಿ ಮೀರಿದ ಆಸ್ತಿ ಸಂಪಾದನೆ ತಡೆಗಟ್ಟಲು 'ಲೋಕಾಯುಕ್ತ' ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ.
ಗ್ರಾಮಾಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ ನೀ ತಾನೆ ಹೇಳಿದ್ದು. ಆದ್ರೆ ಬಾಪೂ ಇಂದು ನಮ್ಮ ದೇಶದ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಿಂದೆ ಅವಿದ್ಯಾವಂತ ನಿರುದ್ಯೋಗಿಗಳು ಅಂತ ಇದ್ರಲ್ಲ, ಆದ್ರೆ ಇಂದು ವಿದ್ಯಾಂವಂತರು ಉದ್ಯೋಗ ದೊರೆಯದೇ ಸರ್ಕಾರ ವಿರೋಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬಾಪು ಹಿಂದೆ 'ಉಳುವವನೇ ಹೊಲದೊಡೆಯ' ಅಂತ ಇತ್ತಲ್ವಾ? ಆದರೆ ಇಂದು ನಮಗೆ ಉಳಿಯೋಕೆ ಭೂಮಿಯಿಲ್ಲದ ಪರಿಸ್ಥಿತಿ ಎದುರಾಗಿದೆ. ಇದ್ದ ಭೂಮಿಯ ಬೆಲೆ ನಮಗೆಟುಕದಷ್ಟು ಮೇಲೇರಿದೆ. ಇಂದು ಕಾಡು, ಪ್ರಾಣಿ-ಪಕ್ಷಿ, ನೀರು ಶುದ್ದ ಗಾಳಿ ಅಳಿವಿನಂಚಿನಲ್ಲಿದೆ. ಕಾಡಿನ ಜಾಗದಲ್ಲಿ ದೊಡ್ಡ-ದೊಡ್ಡ ಕಾರ್ಕಾನೆ, ಮನೆಗಳು ತಲೆ ಎತ್ತಿವೆ. ಮಾನವನ ಈ ಕೃತ್ಯದಿಂದ ಬೇಸತ್ತ ಪ್ರಕೃತಿ ಸುನಾಮಿ, ಬಿರುಗಾಳಿ, ಪ್ರವಾಹ ಮತ್ತು ಬರಗಾಲದಂತಹ ಭಯಾನಕ ತಿರುಗೇಟು ನೀಡಿದೆ. ಆದರೂ ಇನ್ನೂ ಮಾನವ ಎಚ್ಚೆತ್ತುಕೊಳ್ಳಿಲ್ಲ. ಅವನ ಕೃತ್ಯ ಈಗಲೂ ಮುಂದುವರೆಯುತ್ತಿದೆ.
ಬಾಪೂ, ನೀನೇನೋ ಅಹಿಂಸಾ ತತ್ವ ಪ್ರತಿಪಾದಿಸಿದೆ. ಆದರೆ ಇಂದು ಎಲ್ಲಿ ನೋಡಿದರೂ ಕೊಲೆ, ಸುಲಿಗೆ, ಮೋಸ-ವಂಚನೆ, ಹಿಂಸೆ, ಕೋಮುಗಲಭೆ, ಅನ್ಯಾಯ-ಅತ್ಯಾಚಾರ ಕಾಣುತ್ತಿದೆ. ಹಿಂದೆ ನಮ್ಮ ದೇಶ ವಿದೇಶಿಯರ ಆಕ್ರಮಣಕ್ಕೆ ಬಲಿಯಾಗುತ್ತಿತ್ತು. ಆದರೆ ಇಂದು ಭಯೋತ್ಪಾದಕರ ದಾಳಿಗೆ ನಿರಂತರವಾಗಿ ತುತ್ತಾಗುತ್ತಿದೆ. ಹೊರಗಿನ ಭಯೋತ್ಪಾದಕರಿಗೆ ನಮ್ಮ ಧನದಾಹಿ ಭೃಷ್ಟ ಅಧಿಕಾರಿಗಳು ನೆರವು ನೀಡುತ್ತಿರುವುದು ನಮಗೆ ಬೇಸರ ತಂದಿದೆ. ಇವರನ್ನು ನಮ್ಮ ವ್ಯವಸ್ಥೆಯೊಳಗಿನ ಭಯೋತ್ಪಾದಕರು ಎಂದರೆ ತಪ್ಪಾಗಲಾರದು.
ಬಾಪೂ... ನಮ್ಮಲ್ಲಿ ಹುಟ್ಟಿ, ನಮ್ಮ ಅನ್ನ ತಿಂದುಂಡು ನಮಗೇ ಎರಡು ಬಗೆಯೋ ಇವರನ್ನು ತಡೆಯೋದು ಹೇಗೆ? ಅಡಿಪಾಯವೇ ಸರಿಯಿಲ್ಲದಿದ್ದರೆ ಮುಂದೆ ನಮ್ಮ ದೇಶದ ಸ್ಥಿತಿಯೇನು?
ಇನ್ನು ನೀ ಹೇಳಿದ್ದೆ. 'ಒಬ್ಬಳು ಹೆಂಗಸು 12 ಗಂಟೆ ರಾತ್ರಿಯಲ್ಲಿ ಯಾವಾಗ ಒಬ್ಬಳೇ ರಸ್ತೆಯಲ್ಲಿ ಸಂಚರಿಸುತ್ತಾಳೊ ಅಂದು ದೇಶದ ಸ್ವಾತಂತ್ರ್ಯ ಪರಿಪೂರ್ಣವಾಗುವುದು ಎಂದು. ಆದ್ರೆ ಇಂದು ಮಹಿಳೆ ಮಧ್ಯಾಹ್ನ 12 ಗಂqಎಯ್ ಹೊತ್ತಲ್ಲೂ ನಿರ್ಭೀತಳಾಗಿ ಸಂಚರಿಸಲಾಗುತ್ತಿಲ್ಲ. ಸಿನಿಮಾ, ಮಾಧ್ಯಮಗಳಲ್ಲಂತೂ ಹೆಣ್ಣನ್ನು ಮಾರಾಟದ ಸರಕನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಬಾಪೂ ನೀನು ವಿದೇಶದಲ್ಲಿ ಕಲಿತು ಇಲ್ಲಿ ಬಂದು ಉಡುಗೆ ತೊಡುಗೆ, ಗುಣ ನಡತೆಯಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದೆ. ಆದರೆ ಇಂದಿನ ಜನ ತಮ್ಮ ಸಂಸ್ಕೃತಿಯನ್ನು ತೊರೆದು, ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.
ಬಾಪೂ... ನನ್ನ ಈ ಪತ್ರ ಓದಿ ನಿನಗೆ ನಮ್ಮ ದೇಶದ ಜನರ ಬಗ್ಗೆ ಬೇಜಾರಾಗುತ್ತಿರಬಹುದು. ಆದರೆ ನಿನಗೆ ಬೇಜಾರು ಮಾಡುವ ಉದ್ದೇಶ ನನಗಿಲ್ಲ. ಇಂದು ಜನ ಅಂದು ನೀವು ಮಾಡಿದ ಬಲಿದಾನ, ಪಟ್ಟ ಶ್ರಮ, ಹೋರಾಟ ಮರೆತು, ಯಾವತ್ತೂ ಸರಿಪಡಿಸಲಾಗದ ತಪ್ಪನ್ನು ಮಾಡ ಹೊರಟಿದ್ದಾರೆ. ಇಂದು ಜನ ಇನ್ನೊಂದು ಗಾಂಧಿಯ ನಿರೀಕ್ಷೆಯಲ್ಲಿದ್ದಾರೆಯೇ ಹೊರತು, ತಾವು ಒಳ್ಳೆಯವರಾಗಿ ಸಮಾಜಕ್ಕೆ ಒಳಿತನ್ನು ಮಾಡುವ ಗುಂಗಿನಲ್ಲಿಲ್ಲ. ನಿಮ್ಮ ಕನಸಿನ ನಾಡು ಇಂದು ಅಶಾಂತಿಯ ಬೀಡಾಗಿದೆ. ಗೊಂದಲದ ಗೂಡಾಗಿದೆ. ಇದು ಇನ್ನಷ್ಟು ಹದಗೆಡುವುದನ್ನು ತಡೆಯಲೇಬೇಕು. ಯಾಕೋ ಗೊತ್ತಿಲ್ಲ ಈಗೀಗ ನಿನ್ನ ನೆನಪು ತುಂಬಾ ಆಗ್ತಿದೆ. ನಮ್ಮ ದೇಶದ ಅಭಿವೃದ್ದಿಗೆ ನಿನ್ನಂಥ ನಾಯಕ ಬೇಕೆನಿಸುತ್ತದೆ. ಆದ್ದರಿಂದ ಕಡೆಯದಾಗಿ ನಿನ್ನಲ್ಲಿ ಹೇಳುವುದೆಂದರೆ ನಮ್ಮ ತಪ್ಪುಗಳನ್ನು ಮನ್ನಿಸಿ ಮತ್ತೊಮ್ಮೆ ಹುಟ್ಟಿ ಬಾ...
ನಿನ್ನ ಆಶಿರ್ವಾದ, ಆಗಮನದ ನಿರೀಕ್ಷೆಯಲಿದ್ದೇನೆ...
ಕೆ.ಕೆ.ಫಾತಿಮ ಇಶ್ರತ್

Wednesday, September 30, 2009

ಸವಿ ಸವಿ ನೆನಪು ಸಾವಿರ ನೆನಪು...



ಪ್ರತಿಯೊಬ್ಬನೂ ತನ್ನ ಬದುಕಿನಲ್ಲಿ ಬಾಲ್ಯವೆಂಬ ಚಂದ್ರಬಿಂಬವನ್ನು ಕಂಡಾಗ ಮುಗುಳ್ನಗುತ್ತಾನೆ. ಆ ದಿನಗಳೇ ಹಾಗೆ. ಸ್ವಚ್ಛಂದ ಪರಿಸರದಲ್ಲಿ ರೆಕ್ಕೆ ಬಿಚ್ಚಿ ಸಂತಸದ ಹಕ್ಕಿಯಾಗಿ ಸುತ್ತಿದ ದಿನಗಳವು. ಆ ದಿನಗಳು ಒಂದೊಂದು ಕಾದಂಬರಿಯಾಗುವಷ್ಟು ಸ್ವಾರಸ್ಯಕರವಾಗಿರುತ್ತವೆ. ಕೆಲವರ ಬಾಲ್ಯ ವಾತ್ಸಲ್ಯದ ತೊಟ್ಟಿಲಾದರೆ, ಇನ್ನು ಕೆಲವರದು ಅನಾಥ ಪ್ರಜ್ಞೆಯನ್ನು ಆವರಿಸಿರುವಂತಹದ್ದು.


ವ್ಯಕ್ತಿಯೊಬ್ಬ ಇಂದು ಏನೇ ಆಗಿದ್ದರೂ ಕಳೆದು ಹೋದ ಬಾಲ್ಯದ ದಿನಗಳನ್ನು ದ್ವೇಷಿಸಲಾರ. ಆತನನ್ನು ಜೀವನದ ಉತ್ತುಂಗ ಶಿಖರಕ್ಕೆ ಕೊಂಡೊಯ್ದದ್ದು ಬಾಲ್ಯದಲ್ಲಿ ನಡೆದ ಘಟನೆಗಳು ಕಲಿಸಿಕೊಟ್ಟ ಪಾಠವಾಗಿರಲೂ ಬಹುದು. ಭಾರತದ ಮಾಜೀ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅವರು ಬಾಲ್ಯದಲ್ಲಿ ರಾಮೇಶ್ವರದ ಬೀದಿಗಳಲ್ಲಿ ದಿನಪತ್ರಿಕೆ ಮಾರುತ್ತಿದ್ದಾಗ ಹಾರುತ್ತಿದ್ದ ವಿಮಾನಗಳನ್ನು ಕಂಡು, ತಾನೂ ಪೈಲೆಟ್ ಆಗಬೇಕು ಎಂದು ಕನಸು ಕಂಡಿದ್ದರಂತೆ. ಆ ಒಂದು ಪ್ರೇರಣೆಯೇ ಮುಂದೆ ಅವರನ್ನು ಆ ಮಟ್ಟಕ್ಕೇರಿಸಿತು.


ಬಾಲ್ಯದಲ್ಲಿ ಹೆತ್ತವರಿಂದ ಸಿಗುವ ಮಮತೆ ಅಪಾರ. ಆ ಸಮಯದಲ್ಲಿ ಏನೇ ಕಿತಾಪತಿಗಳು ಮಾಡಿದ್ದರೂ ಅದು ಆಟಕ್ಕುಂಟು ಲಕ್ಕಕ್ಕಿಲ್ಲ ಎಂಬಂತವುಗಳು. ಬಾಲ್ಯದಲ್ಲಿ ತೆಗೆಸಿದ ಹಾಲುಗಲ್ಲದ ಫೋಟೋಗಳು, ಅಂಬೆಗಾಲಿಡುತ್ತಾ ಹಲ್ಲಿಲ್ಲದೆ ನಗೆ ಬೀರಿದ ದಿನಗಳು, ತೊದಲು ಮಾತಾಡುತ್ತಿದ್ದುದು, ಚಂದಮಾಮನನ್ನು ಚೆಂಡೆಂದು ತಿಳಿದು ಅಮ್ಮನೊಂದಿಗೆ ತಂದುಕೊಡುವಂತೆ ಹೇಳಿ ಅಳುತ್ತಿದ್ದ ದಿನಗಳನ್ನು ಯೋಚಿಸಿದರೆ ಮುಖದಲ್ಲೊಮ್ಮೆ ಮಂದಹಾಸ ಮೂಡುತ್ತದೆ.


'ಮೂರರಲ್ಲಿ ಕಲಿತದ್ದು ನೂರರವರೆಗೆ...' ಎಂಬ ಗಾದೆ ಮಾತಿನಂತೆ ಎಳೆತನದ ಕಲಿಕೆ ಚಿರವಾಗುತ್ತದೆ. ಮನೆಯೇ ಮೊದಲ ಪಾಠಶಾಲೆಯಾಗಿ, ತಾಯಿಯೇ ಮೊದಲ ಗುರುವಾಗುತ್ತಾಳೆ. ಶಾಲೆಯ ಕಡೆಗೆ ಪುಟ್ಟ-ಪುಟ್ಟ ಹೆಜ್ಜೆ ಹಾಕುತ್ತಿದ್ದ ದಿನಗಳನ್ನು ನೆನೆದರೆ ಏನೋ ಒಂಥರಾ ಖುಷಿಯಾಗುತ್ತದೆ. ಅಂದಿನ ತುಂಟಾಟಗಳನ್ನು ನೆನೆದರೆ ನಗೆ ಉಕ್ಕುತ್ತದೆ. ನಮಗರಿವಿಲ್ಲದಂತೆ ಕಣ್ಣೀರು ಹರಿಯುತ್ತದೆ. ಧರ್ಮ-ಜಾತಿ, ಶ್ರೀಮಂತ-ಬಡವ, ಮೇಳು-ಕೀಳು, ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲದೇ ಮುಗ್ಧ ಮನಸ್ಸಿನಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದುದು, ಬೆತ್ತದ ರುಚಿ ತೋರಿಸುತ್ತಿದ್ದ ಪಿ.ಟಿ. ಸರ್, ಕನ್ನಡ ಅಧ್ಯಾಪಕರಿಗೆ ಹೆದರಿ ಪದ್ಯಗಳನ್ನು ಕಂಠಪಾಠ ಮಾಡುತ್ತಿದ್ದು, ಅಪ್ಪ ಹೊಡೆದಾಗ ಬುದ್ದಿವಾದ ಹೇಳುವ ಅಮ್ಮ ಹೀಗೆ ಸಾವಿಲ್ಲದ ನೆನಪುಗಳು ಕಣ್ಣೆದುರಿಗೆ ಬರುತ್ತದೆ. ಆ ಶಾಲಾ ದಿನಗಳ ಗೆಳೆಯರು ಎಲ್ಲಾದರೂ ಕಾಣಸಿಕ್ಕಾಗ 'ಚಡ್ಡಿ ದೋಸ್ತು' ಎಂದು ಪರಿಚಯಿಸುವಾಗ ಸಿಗುವ ಮಜಾವೇ ಬೇರೆ.


'ಸವಿಸವಿನೆನಪು ಸಾವಿರ ನೆನಪು' ಎಂಬ 'ಮೈ ಆಟೋಗ್ರಾಫ್' ಚಿತ್ರದ ಗೀತೆಯಂತೆ ಸವಿನೆನಪುಗಳೇ ತುಂಬಿರುವ ಬಾಲ್ಯ ಮತ್ತೆಂದೂ ಮರಳಿ ಬಾರದು. ಆದರೆ ಆ ನೆನಪುಗಳು ಎಂದಿಗೂ ನಮ್ಮಿಂದ ಮರೆಯಾಗದು.

ರಾಗಿಂಗ್ ಅಲ್ಲ, ಸ್ವಾಗತ



ಹೊಸ ಕಾಲೇಜು, ಹೊಸ ವಾತಾವರಣ ಎಂದಾಗ ಅಲ್ಲಿಗೆ ಹೋಗುವುದೇ ಒಂಥರಾ ಬೇಜಾರು. ರಾಗಿಂಗ್ ಎಂಬ ಪೆಡಂಭೂತದ ಕೆಂಗಣ್ಣಿಗೆ ಗುರಿಯಾಗಿ ಹಿರಿಯ ವಿದ್ಯಾರ್ಥಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕೋ ಎಂಬ ಭಯ. ಈ ಸಹಜ ಅಳುಕಿನಿಂದಲೇ ನಾನು ಕಾಲೇಜು ಪ್ರವೇಶಿಸಿದ್ದೆ. ಆದರೆ ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸಿದ ರೀತಿ ನೋಡಿ ಅಚ್ಚರಿಪಟ್ಟೆ.
ಅದೊಂದು ಸಣ್ಣ ಕಾರ್ಯಕ್ರಮ. ಪದವಿಯ ಪ್ರಥಮ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದ ನಮ್ಮನ್ನು ಸ್ವಾಗತಿಸಲು ಅಲ್ಲಿ ದ್ವಿತೀಯ, ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ದಂಡು ನೆರೆದಿತ್ತು. ಕಾರ್ಯಕ್ರಮ ನಿಗದಿಯಾಗಿದ್ದ ಕೊಠಡಿಯಲ್ಲಿ ನಮಗಿಂತ ಮೊದಲೇ ಒಳ ಪ್ರವೇಶಿಸಿದ ಹಿರಿಯ ವಿದ್ಯಾರ್ಥಿಗಳು ನಮ್ಮನೊಂದೆರಡು ನಿಮಿಷ ಹೊರಗೆ ಕಾಯಿಸಿದರು. ಎರಡ್ಮೂರು ನಿಮಿಷಗಳ ಬಳಿಕ ನಮ್ಮನ್ನು ಒಳಗೆ ಕರೆದಾಗ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಖುಷಿ ಪಟ್ಟಿದ್ದೆ.
ಪಾನಕ ಮತ್ತು ಬೆಲ್ಲದ ಜೊತೆಗೆ ಶುಭಾಷಯ ಪತ್ರವೊಂದನ್ನು ಕೈಗಿತ್ತು ನಮಗಾಗಿ ಕಾದಿರಿಸಿದ್ದ ಆಸನದಲ್ಲಿ ಕುಳ್ಳಿರಿಸಿದರು. ಆಗ ಶುರು ನಮ್ಮ ಅಗ್ನಿ ಪರೀಕ್ಷೆ. ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಸಮಯ ಬಂತು. ಮೊದಲು ಎಷ್ಟೇ ತಯಾರಿ ಮಾಡಿಕೊಂಡು ಬಂದಿದ್ದರೂ ಅಷ್ಟು ಜನರೆದುರಲ್ಲಿ ಮಾತನಾಡುವಾಗ ನಾಲಗೆ ತಡವರಿಸಿತು. ನನ್ನ ಹವ್ಯಾಸ ಹಾಡುವುದು ಎಂದಾಗ ಮರುತ್ತರವಾಗಿ ' one song please... ' ಎಂದು ಬಂದಾಗ ನಗಬೇಕೇ? ಅಳಬೇಕೇ? ಎಂದು ಗೊತ್ತಾಗಲಿಲ್ಲ. ನಾನಂತೂ ಬಚಾವಾದೆ. ನನ್ನ ಕೆಲ ಸ್ನೇಹಿತೆಯರಿಗಂತೂ ಹಾಡಲೇಬೇಕಾಯಿತು. ಅಷ್ಟೇ ಅಲ್ಲ ' once more...' ಎದುರಿಸಬೇಕಾಯಿತು. ಕೆಲವರಂತೂ ತಮ್ಮನ್ನು ತಾವು ಪರಿಚಯಿಸಿಕೊಂಡ ಬಗೆ ವಿಶೇಷವಾಗಿತ್ತು.
ನಿಮ್ಮ ಜೊತೆ ನಾವಿದ್ದೇವೆ ಎಂಬಂತೆ ಹಿರಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ನಮಗೆ 'ಸಾಥ್' ನೀಡಿದರು. ಸುಮಾರು ಒಂದೂವರೆ ಘಂಟೆಗಳ ಕಾಲ ನಡೆದ ಆ ಕಾರ್ಯಕ್ರಮ ಕೇವಲ ಒಂದು ನಿಮಿಷದಂತೆ ಕಳೆದುಹೋಗಿತ್ತು. ನಮ್ಮಲ್ಲಿದ್ದ ಸುಪ್ತ ಪ್ರತಿಭೆಯೊಂದು ಅಲ್ಲಿ ಹೊರಬಂದಿತ್ತು. ನಮ್ಮ ಜೀವನದ ಅಮೂಲ್ಯ ಕ್ಷಣವೆಂಬಂತೆ ನಡೆದ ಆ ಕ್ಷಣಗಳು ಮನಸ್ಸಿನ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ.